Sunday, January 3, 2010

ಹೊಸ ವರ್ಷ ಹೊಸ ಹುಮ್ಮಸ್ಸು . . .

2009 ಮುಗಿದು 2010 ಬಂದೇ ಬಿಡ್ತು; ಮತ್ತೊಂದು ಹೊಸ ವರ್ಷ. ಕಾಲ ನಿಲ್ಲುವುದಿಲ್ಲ, ತನ್ನ ಪಾಡಿಗೆ ತಾನು ಮುಂದೆ ಸಾಗುತ್ತಲೇ ಇರುತ್ತದೆ. ಯಾರ ಯಾವ ಮುಲಾಜೂ ಇಲ್ಲ; ಮನಸ್ಸಿನ ಆಲಸ್ಯಕ್ಕೋ ದೇಹದ ಜಡತ್ವಕ್ಕೋ ಕಟ್ಟುಬಿದ್ದು ಹಿಂದೆ ಬೀಳುವವರು ನಾವೇ. ಮಾಡಬೇಕೆಂದುಕೊಂಡಿದ್ದ ಎಷ್ಟೋ ಕೆಲಸಗಳನ್ನು ಮುಂದೂಡುವ ಚಾಳಿ, ಕೊನೆಗವು ಅಲ್ಲೇ ಬಾಕಿ.


ಮೊನ್ನೆ ಹೀಗಾಯಿತು; ಸ್ನೇಹಿತರೊಬ್ಬರು anniversary  ಆಚರಿಸಿಕೊಂಡ್ರಾ? ಅಂಥ ಮೆಸೇಜ್ ಕಳಿಸಿದ್ದರು. ಮದುವೆಯಾದ ದಿನ ಇನ್ನೂ ದೂರ ಇದೆಯಲ್ಲಾ... ಯಾಕೆ? ಅಂಥ ಅರ್ಥ  ಆಗಲಿಲ್ಲ. ಕೊನೆಗೆ ಗೊತ್ತಾಗಿದ್ದು ನಾನು ಬ್ಲಾಗ್ ಗೆ ಬರೆಯದೆ ಆಗಲೇ ಒಂದು ವರ್ಷ ಕಳೆದಿದೆ! ಮನಸ್ಸಿಗೆ ಪಿಚ್ಚೆನೆಸಿತು; ಒಂದು ವರ್ಷ ಕಡಿಮೆ ಕಾಲಾವಧಿಯೇನಲ್ಲ; ಏನು ಮಾಡಿದೆ ನಾನು . . . .?

ಮದುವೆಯ ನಂತರದ ಬದಲಾದ ಜೀವನಕ್ಕೆ ಹೊಂದಿಕೊಳ್ಳುವ ತಹತಹ,  ಒಂದಷ್ಟು ದಿನ  ಏನೋ ಬೇಸರ, ಮತ್ತೊಂದಿಷ್ಟು ದಿನ ಕೋಪ-ತಾಪ, ಆಫೀಸಿಗೆ ಹೊರಡುವ ಗಡಿಬಿಡಿ,  ಅಲ್ಲೇನೋ ಕಿರಿಕಿರಿ, ಸಂಜೆ ಮನೆಗೆ ಬಂದರೆ ಅಡುಗೆ ಮಾಡುವ ತರಾತುರಿ, ಊಟ ಆಯ್ತೋ ಮತ್ತೆ ಮರುದಿನದ ತಿಂಡಿ-ಅಡುಗೆಗೆ ತಯಾರಿ; ವೀಕೆಂಡಲ್ಲಿ ಮನೆ ಕ್ಲೀನಿಂಗ್, ಬಟ್ಟೆ ವಾಷಿಂಗ್, ಬೋರಾಯ್ತು ಅಂಥ ಸ್ವಲ್ಪ ಶಾಪಿಂಗ್, ಮುಂದಿನಾ ವಾರಕ್ಕೆ ಬೇಕಾಗೋ ಸಾಮಾನು-ತರಕಾರಿಗಳನ್ನು ಫ್ರಿಜ್ ನಲ್ಲಿ ತುಂಬಿಸಿಡೋ ತಲೆಬಿಸಿ, ಇವುಗಳ ಮಧ್ಯೇನೇ ಸ್ವಲ್ಪ ರೋಮಾನ್ಸ್, ಹಿಂದೇನೇ ಅವನ ಜೊತೆ ಜಗಳ-ಮುನಿಸು, ಒಂದು ಬೇಸರದಿಂದ ಇನ್ನೇನು ಹೊರಗೆ ಬಂದೆ ಎನ್ನುವಷ್ಟರಲ್ಲಿ  ಮತ್ತೊಂದು ದುಗುಡ, ಒಂಥರಾ ಡಿಪ್ರೆಷನ್  . . . . .


ಹೀಗೆ ಕಳೆದೇ ಹೋಗಿದ್ದೆ ನಾನು. ಬರೆಯುವುದಕ್ಕೆ ವಿಷಯಗಳು, ಘಟನೆಗಳು, ಅನುಭವಗಳು ಇರಲಿಲ್ಲ ಅಂಥಲ್ಲ; ಬರೀಬೇಕು ಅನ್ನಿಸಿದಾಗ ಟೈಮ್ ಸಿಗಲ್ಲ, ಟೈಮ್ ಇದ್ದಾಗ ಬರೆಯುವ ಮೂಡ್ ಇರಲ್ಲ, ಕೆಲವು ದಿನಗಳ ನಂತರ ಎರಡೂ ಸಿಕ್ಕಿ  ಕುಳಿತುಕೊಂಡಾಗ ಆ ತೀವ್ರತೇನೇ  ಇರಲ್ಲ!  ಹೀಗಾಗಿ ಭಾವನೆಗಳೇ ಹೊಮ್ಮಲ್ಲ, ಅಕ್ಷರಗಳೇ ಮೂಡಲ್ಲ.  ಅದೇನೋ ಗೊತ್ತಿಲ್ಲ, ಎಲ್ಲರೂ ಬರೆಯುವ ಹಾಗೆ ಬರೀಬೇಕು ಅಂದುಕೊಂಡಿದ್ದನ್ನೆಲ್ಲಾ ಅಂದುಕೊಂಡಾಗಲೆಲ್ಲಾ ಬರೆದು ಬಿಸಾಕಕ್ಕೆ ನನ್ನಿಂದ ಆಗೋದೇ ಇಲ್ಲ; ತುಂಬ ತಿಣುಕಾಡಬೇಕು, ಕೆಲವೊಮ್ಮೆ ಎಷ್ಟು ಒದ್ದಾಡಿದರೂ ಮನಸ್ಸಿನಲ್ಲಿನ ಭಾವ, ಚಡಪಡಿಕೆ ಅಕ್ಷರ ರೂಪಕ್ಕಿಳಿಯುವುದೇ ಇಲ್ಲ.  ಈ ರೀತಿಯ ಒತ್ತಡ, ಗೊಂದಲದಲ್ಲಿಯೇ ದಿನ-ವಾರ-ತಿಂಗಳುಗಳನ್ನ ಹಾದು ಇಡೀ ವರ್ಷವನ್ನೇ ಕಳೆದುಬಿಟ್ಟಿದ್ದೇನೆ.


ಮತ್ತೊಂದು ನನ್ನನ್ನ ತುಂಬ ಕಾಡಿದ್ದು, ಗಂಡಸಿನಂತೆ ಹೆಂಗಸು ವೃತ್ತಿಜೀವನದಲ್ಲಿ ತನ್ನನ್ನ ತಾನು ಸಂಪೂರ್ಣ ತೊಡಗಿಸಿಕೊಳ್ಳಲಾಗುವುದೇ ಇಲ್ಲ; ಮನೆಯ ಸಮಸ್ಯೆ -ಕೆಲಸಗಳು ಅವಳ ಶ್ರಮ-ಸಾಮಾರ್ಥ್ಯ-ಸಮಯದಲ್ಲಿ  ಪಾಲು ತೆಗೆದುಕೊಳ್ಳುತ್ತಿರುತ್ತವೆ. ಹಾಗೆಯೇ ಮನೆಯಲ್ಲಿಯೂ ಆಫೀಸಿನ ಸ್ಫರ್ಧೆ, ಒತ್ತಡದಿಂದಾಗಿ ಒಳ್ಳೆಯ ಹೆಂಡತಿ-ತಾಯಿ-ಗೃಹಿಣಿ ಎನ್ನಿಸಿಕೊಳ್ಳುವುದು ಕಷ್ಟ; ಎರಡೂ ಕಡೆಯೂ ಒಂದು average performance ಅಷ್ಟೆ. ಈ ಎಲ್ಲಾ ಗೋಜಲುಗಳ ನಡುವೆಯೇ ಸೃಜನಶೀಲ ಹಸಿವಿರುವವರು ಹೊಸಾ ಹೊಸಾ ಪುಸ್ತಕಗಳನ್ನೋದುವುದಕ್ಕೆ, ಬರೆಯುವುದಕ್ಕೆ, ನಾಟಕ-ಸಿನೆಮಾ ನೋಡುವುದಕ್ಕೆ, ಹೊಸಾ ವಿಷಯಗಳನ್ನು ಕಲಿಯುವುದಕ್ಕೆ ಸಮಯವನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಬದುಕು ನಿಂತ ನೀರಿನ ತರಹ, no progress no ಉತ್ಸಾಹ . . . ಜೊತೆಗೆ ಕಾಲದಿಂದ ಕಾಲಕ್ಕೆ update ಆಗುತ್ತಿಲ್ಲದಿದ್ದರೆ , ಹೊರ ಪ್ರಪಂಚಕ್ಕೆ ಕಣ್ಣು-ಕಿವಿ ತೆರೆದುಕೊಳ್ಳದಿದ್ದರೆ ಇಂದಿನ ಸ್ಫರ್ಧಾಯುಗದಲ್ಲಿ ಉಳಿದುಕೊಳ್ಳುವುದು ಕಷ್ಟ.  ಇವೆಲ್ಲದರ ನಡುವೆ ಮನಸ್ಸಿನಲ್ಲಿದ್ದಿದ್ದನ್ನು ಹೊರಗೆ ಹಾಕುವ, ಹೊರಜಗತ್ತಿಗೆ ನಮ್ಮನ್ನ ತೆರೆದುಕೊಳ್ಳುವ ಬರವಣಿಗೆ ನನ್ನ ಪಾಲಿಗೆ ಒಂಥರಾ ರಿಲ್ಯಾಕ್ಸೇಶನ್ ನೀಡುವ ಬದುಕಿಗೆ ಉತ್ಸಾಹವನ್ನು ತುಂಬುವ ಕ್ರಿಯೆ. ಹೀಗೆ ಹೇಳ್ತಿರಬೇಕಾದ್ರೆ ಕಥೆಗಾರ್ತಿ ಸುನಂದಾ ಪ್ರಕಾಶ ಕಡಮೆಯವರು ಹೇಳಿದ ಮಾತುಗಳು ನೆನಪಿಗೆ ಬರ್ತಿವೆ - "ಈ ಓದು-ಬರವಣಿಗೆಯ ಸಾಂಗತ್ಯವೆಂದರೆ ಒಂದು ಸತ್ಸಂಗವೇ ಏನೋ. ಯಾಕೆಂದರೆ ಇದನ್ನು ಆರಂಭಿಸುವುದಕ್ಕಿಂತ ಮೊದಲು ನಾನು ಎಂಥದೋ ಅತೃಪ್ತಿ ಅಸಹನೆ ಅಸಮಧಾನದಿಂದ ಬಳಲುತ್ತಿದ್ದೆ. ಆದರೀಗೆ ಅವೆಲ್ಲ ಇದ್ದಕ್ಕಿದ್ದಂತೆ ಮಾಯವಾಗಿ ಒಂದು ರೀತಿಯ ನೆಮ್ಮದಿ ಆವರಿಸಿಕೊಂಡಂತಿದೆ.  ಖುಷಿಯಾಗಿದ್ದೇನೆ. ಒಂದು ಕಥೆ ಬರೆದು ಮುಗಿಸಿದ ನಂತರ ಸಿಗುವ ಸಂತೃಪ್ತಿಗೆ ಸಮನಾದುದು ಯಾವುದೂ ಇಲ್ಲ. ನನ್ನ ಬರವಣಿಗೆ ನನಗೆ ಸುತ್ತ ಎಲ್ಲರ ಪ್ರೀತಿ ಗೌರವ ತಂದುಕೊಟ್ಟಿದೆ. ಈ ಕಾರಣಕ್ಕೆ ಬರವಣಿಗೆಗೆ ನಾನು ಸದಾ ಋಣಿಯಾಗಿದ್ದೇನೆ".


ಹೀಗಾಗಿ ಈ ವರ್ಷ ಆದ್ರೂ ಸ್ವಲ್ಪ ಬರೀಬೇಕು, ಕ್ರಿಯಾಶೀಲವಾಗಿರಬೇಕು, ಬ್ಲಾಗನ್ನ ಜೀವಂತವಾಗಿಟ್ಟಿರಬೇಕು ಎಂದುಕೊಂಡಿದ್ದೇನೆ; ಆದ್ರೆ ಇದು ಆರಂಭ ಶೂರತ್ವ ಆಗದಿದ್ರೆ ಸಾಕು. ಯಾಕಂದ್ರೆ ಬ್ಲಾಗ್ ಆರಂಭಿಸಿದಾಗ ಅದೇನು ಖುಷಿ, ಉತ್ಸಾಹ; ಯಾರಾದ್ರೂ ಓದಿದ್ದಾರಾ? ಕಾಮೆಂಟ್ ಮಾಡಿದ್ದಾರಾ? ಎಂದು ಪದೇ ಪದೇ ಹೋಗಿ ನೋಡುವುದು; ಕಾಮೆಂಟ್ ಕಂಡರೆ ಒಂಥರಾ ಸಾರ್ಥಕತೆಯ ಭಾವ! ನಂತರದ ದಿನಗಳಲ್ಲಿ ಹುಮ್ಮಸ್ಸು ಠುಸ್ . . . ಈ ವರ್ಷ ಹಾಗಾಗದಿರಲಿ  ಅಂಥ ನನಗೆ ನಾನೇ ಹಾರೈಸಿಕೊಳ್ತೇನೆ. ನನ್ನನ್ನು ಎಚ್ಚರಿಸಿ ಈ ವರ್ಷ ಸಂಭ್ರಮಿಸುವ ಕ್ಷಣಗಳು ಹೆಚ್ಚಾಗಲಿ ಎಂದು ಹಾರೈಸಿದ ಕುಮಾರ್ ಗೂ ಒಂದ್ರಾಶಿ ಥ್ಯಾಂಕ್ಸ್ ಜೊತೆಗೆ ಹೊಸ ವರ್ಷ ಹೊಸಾ ಹೊಸಾ ಅವಕಾಶಗಳನ್ನು ತೆರೆದು ಖುಷಿ ಹೆಚ್ಚಿಸಲಿ ಎನ್ನುವ ಶುಭ ಹಾರೈಕೆ.