Wednesday, September 10, 2008

ಆ ದಿನಗಳು . . . .

ಕೆಲವು ನೆನಪುಗಳು ಸದಾ ಹಸಿರು ; ನೆನಪಾದಾಗ ಮನಸ್ಸಿನಲ್ಲಿ ಸಂತೋಷದ ಬುಗ್ಗೆ, ಏನೋ ಉಲ್ಲಾಸ ; ಅಂಥವುಗಳಲ್ಲಿ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕೆಲಸ ಮಾಡ್ತ ಹೈದರಾಬಾದಿನಲ್ಲಿ ಕಳೆದ ದಿನಗಳದೂ ಒಂದು. ಈಗಷ್ಟೇ, ಅಲ್ಲೇ ಕೆಲಸ ಮಾಡುತ್ತಿರುವ ನನ್ನ ಸ್ನೇಹಿತನೊಬ್ಬನಿಗೆ ಫೋನಾಯಿಸಿದ್ದೆ, ಅವನ ಜೊತೆ ಮಾತಾಡುತ್ತಿರುವಾಗ ಅಲ್ಲಿಯ ಚಿತ್ರಗಳೆಲ್ಲ ಕಣ್ನ ಮುಂದೆ - ಹೈದರಾಬಾದಿನ ಬಸ್ ಸ್ಟ್ಯಾಂಡ್, ಕೋಟಿ, ಫಿಲ್ಮ್ ಸಿಟಿ, ಆಫೀಸ್, ಕ್ಯಾಂಟೀನ್, ನಾನು ಮನೆ ಮಾಡಿಕೊಂಡಿದ್ದ ಸ್ಥಳವಾದ ಭಾಗ್ಯಲತಾ, ಸುಲ್ತಾನ್ ಬಜಾರ್ . . . . ಹೀಗೆ ಪ್ರತಿಯೊಂದೂ. ಫೋನ್ ಇಟ್ಟ ಎಷ್ಟೋ ಹೊತ್ತಿನ ನಂತರವೂ ಅದೇ ಗುಂಗು. ಯಾವಾಗಲೂ ಮನುಷ್ಯನಿಗೆ ಬಿಟ್ಟುಬಂದಿದ್ದರ ಬಗ್ಗೆ ವ್ಯಾಮೋಹ ಜಾಸ್ತಿ ಅಂತೆ; ಹ್ಯದರಾಬಾದಿನ ವಿಷಯದಲ್ಲಿ ನಾನೂ ಈ ಭಾವವನ್ನು ಅನುಭವಿಸಿದ್ದೇನೆ, ಅನುಭವಿಸುತ್ತಿರುತ್ತೇನೆ.


ಎಂ.ಎ. ಮುಗಿಸಿ ಕೆಲಸಕ್ಕಾಗಿ ಅಲೆಯುತ್ತಿದ್ದ ದಿನಗಳವು ; ವರ್ಷದ ಮೇಲಾದರೂ ಕೆಲಸ ಸಿಗದಿದ್ದಾಗ ಪಿ.ಯೂ.ಸಿ.ಯಲ್ಲಿ ಮೊದಲು ಸ್ಯನ್ಸ್ ತೆಗೆದುಕೊಂಡು , ನಂತರ ಆರ್ಟ್ಸ್ ಗೆ ಬದಲಾಯಿಸಿಕೊಂಡು, ಅದರಲ್ಲೂ ಕನ್ನಡ ಆಪ್ಶನಲ್ ತೆಗೆದುಕೊಂಡು ನಂತರ ಅದರಲ್ಲೇ ಎಂ.ಎ. ಮಾಡಿದ್ದಕ್ಕೇ ಹೀಗೆ ಎಂದು ಖಿನ್ನತೆಗೆ ಜಾರಿದ್ದುಂಟು. ಯಾರಿಗಿರುವುದಿಲ್ಲ ಹೇಳಿ, ದುಡಿಯುವ ಆಸೆ ; ಅದರಲ್ಲೂ ನನಗಂತೂ ನನ್ನ ಕಾಲ ಮೇಲೆ ನಿಂತುಕೊಂಡು ನನ್ನ ಅನ್ನ ನಾನೇ ಸಂಪಾದಿಸಿಕೊಳ್ಳಬೇಕೆಂಬ ಅದಮ್ಯ ಆಸೆಯಿತ್ತು ; ಹಾಸ್ಟೆಲ್ಲಿನಲ್ಲಿರುವಾಗ ಗೆಳತಿಯರೆಲ್ಲ ಸೇರಿ ಆ ದಿನಗಳ ಬಗ್ಗೆ ಕನಸು ಕಟ್ಟಿಕೊಂಡು ಖುಷಿಪಡುತ್ತಿದ್ದೆವು.ಮುಂದೆ ಈಟಿವಿ ಯಲ್ಲಿ ಕೆಲಸ ಸಿಕ್ಕು ಹೊರಟು ನಿಂತಾಗ ಬಂದ ಪ್ರತಿಕ್ರಿಯೆಗಳು ಅಷ್ಟೇನೂ ಆಶಾದಾಯಾಕವಾಗಿರಲಿಲ್ಲ ; ಕೆಲಸಕ್ಕೋಸ್ಕರ ಅಷ್ಟು ದೂರ . . . ? ಬೇರೆ ರಾಜ್ಯಕ್ಕೆ ಹೋಗಬೇಕಾ ? ಅದರಲ್ಲೂ ಹೆಣ್ಣುಮಗಳು !!! ಅಲ್ಲಿ ಒಬ್ಬಳೇ ಹೇಗಿರ್ತೀಯಾ ?- ಎನ್ನುವಂತಹ ನಿರುತ್ತೇಜಕ ಮಾತುಗಳು ; ನನ್ನ ಮನೆಯಲ್ಲಿ ಹೋಗುವುದು ಬೇಡ ಎಂದು ಹೇಳದಿದ್ದರೂ ಕಳಿಸುವುದಕ್ಕೆ ಅಷ್ಟೇನೂ ಮನಸ್ಸಿರಲಿಲ್ಲ, ಅಲ್ಲಿಗೆ ಹೋದರೆ ಮದುವೆ ಮಾಡುವುದಕ್ಕೆ ತೊಂದರೆಯಾಗುತ್ತದೆ ಎನ್ನುವ ಆತಂಕ. .

ಈ ಜನ ಯಾಕೆ ತಮ್ಮ ಜೀವನವನ್ನು ಸೀಮಿತಗೊಳಿಸಿಕೊಂಡು ಆಲೋಚಿಸುತ್ತಾರೆ, ಹಾಗೆಯೇ ಬದುಕುತ್ತಾರೆ ? ಮದುವೆ-ಗಂಡ-ಮನೆ-ಮಕ್ಕಳು ಈ ಚೌಕಟ್ಟಿನಿಂದ ಹೊರಗೆ ಬಂದು ಹೊಸ ಹೊಸ ಅನುಭವಗಳನ್ನ ಯಾಕೆ ಪಡೆಯಲಿಚ್ಛಿಸುವುದಿಲ್ಲ ? ಎದ್ದಿದ್ದವು ಪ್ರಶ್ನೆಗಳು ; ಆದರೆ ಕೇಳುವುದರಿಂದ ಹೆಚ್ಚಿನ ಪ್ರಯೋಜನವಿಲ್ಲ ಎಂದೆನಿಸಿ ಹೈದರಾಬಾದಿಗೆ ಹೊರಟುಬಂದಿದ್ದೆ. ರಾಮೋಜಿ ಫಿಲ್ಮ ಸಿಟಿ, ಈಟೀವಿ ಇವುಗಳ ಬಗ್ಗೆ ಹೊರಗಿನವರಿಗೆ ಸಹಜವಾಗಿ ಒಂದು ರೀತಿಯ ಆಕರ್ಷಣೆ ಇರುವಂತೆ ನಾನೂ ಸಂಭ್ರಮ, ಕುತೂಹಲ, ಆತಂಕ ಇನ್ನೂ ಹೇಳಲಾಗದ ಭಾವಗಳೊಂದಿಗೆ ಹೊಸಾ ಪ್ರಪಂಚದಲ್ಲಿ ಕಾಲಿಟ್ಟಿದ್ದೆ. ಅಲ್ಲಿಂದ ಶುರುವಾಗಿತ್ತು ಹೊಸಾಜೀವನ ; ಪರಿಸರ-ಜನರು-ಭಾಷೆ ಪ್ರತಿಯೊಂದೂ ಹೊಸತೇ.

ರಾಮೋಜಿರಾವ್ ನ ಸಾಮ್ರಾಜ್ಯ ಫಿಲ್ಮ್ ಸಿಟಿ ಒಂದು ಮಾಯಾನಗರಿ ; ಸಿನೆಮಾ ಶೂಟಿಂಗ್ ಗಾಗಿ ಎತ್ತೆರೆತ್ತರದ ಬಿಲ್ಡಿಂಗ್ ಗಳು, ಅರಮನೆ, ಕೋಟೆಗಳು, ದೇಚಸ್ಥಾನ, ಜಗತ್ತಿನ ಬೇರೆ ಬೇರೆ ಸ್ಥಳಗಳ ಮಾದರಿಗಳು ಎಲ್ಲವನ್ನೂ ಕೃತಕವಾಗಿ ನಿರ್ಮಿಸಿ ಅದೇ ಪ್ರದೇಶ ಎಂಬ ಭ್ರಮೆ ಹುಟ್ಟಿಸುತ್ತಾರೆ. ಯಶೋಧಾ ಹಾಸ್ಪಿಟಲ್ ಎಂಬ ಬೋರ್ಡ್ ಇದ್ದ ದೊಡ್ಡ ಕಟ್ಟಡವೊಂದನ್ನು ಎಷ್ಟೋ ದಿನಗಳ ಕಾಲ ನಾನು ನಿಜವಾದ ಆಸ್ಪತ್ರೆ ಎಂದೇ ಭಾವಿಸಿದ್ದೆ!!!. ಪ್ರವಾಸಕ್ಕೆಂದು ಬರುವವರಿಗೆ ನಾನಾ ಬಗೆಯ ಆಟಗಳು, ಮನರಂಜನೆಗಳು, ಕಣ್ಮನ ತಣಿಸುವ ಸುಂದರ ಉದ್ಯಾನವನಗಳು ಜೊತೆಗೆ ಹದಿಮೂರು ಭಾಷೆಗಳ ಈಟಿವಿ ಛಾನಲ್ ಗಳ ಕಛೇರಿಗಳಿರುವುದೂ ಇಲ್ಲೇ. ಮನೆಯಲ್ಲಿದ್ದಾಗ ಕೆಲವು ಧಾರಾವಾಹಿಗಳನ್ನ ನೋಡುತ್ತಿದ್ದ ನನಗೆ ಆ ವಿಭಾಗದಲ್ಲಿಯೇ ಕೆಲಸ ಸಿಕ್ಕಿದ್ದು ವಿಶೇಷ. ಮನೆಯಲ್ಲಿ ಆರಾಮಾಗಿ ಕುಳಿತು ಟೀವಿ ನೋಡುತ್ತಿದ್ದ ನನಗೆ ಅದರ ಹಿಂದೆ ಎಷ್ಟೆಲ್ಲ ಜನರ ಶ್ರಮ, ಏನೆಲ್ಲಾ ತಯಾರಿಗಳಿರುತ್ತವೆ ಎಂದು ಗೊತ್ತಾಗಿದ್ದೇ ಆಗ; ಒಟ್ಟಿನಲ್ಲಿ ಹೊಸಾ ರೀತಿಯ ಕೆಲಸ, ಹೊಸಾ ಅನುಭವ . . .

ಐದಾರು ಜನ ಸ್ನೇಹಿತರು ಸೇರಿಕೊಂಡು ಬಾಡಿಗೆ ಮನೆಗಾಗಿ ಅಲೆದಿದ್ದು.ಮನೆ ಸಿಕ್ಕ ನಂತರ ಮಲಗಲು ಹಾಸಿಗೆ-ತಡಿಗಾಗಿ ಕಷ್ಟಪಟ್ಟಿದ್ದು, ಅಂಗಡಿಗಳಿಗೆ ಏನಾದರೂ ತರಲು ಹೋದಾಗ ಭಾಷೆ ಬರದೆ ಒದ್ದಾಡಿದ್ದು ಎಲ್ಲವೂ ವಿಭಿನ್ನ ಅನುಭವಗಳೇ. ಬೆಂಗಳೂರಿನ ಹಾಗೆ ಅಲ್ಲಿ ಬಾಡಿಗೆ ಮನೆಗೆ ಹೆಚ್ಚು ಹಣ ಇಲ್ಲ, ಜೊತೆಗೆ ಅಡ್ವಾನ್ಸ್ ಎಂದು ಸಾವಿರಾರು ರೂಪಾಯಿ ಸುರಿಯಬೇಕಾಗಿಲ್ಲ, ಒಂದು ತಿಂಗಳ ಬಾಡಿಗೆಯನ್ನು ಹೆಚ್ಚು ಕೊಟ್ಟರಾಯಿತಷ್ಟೆ. ಚಿಕ್ಕ ಮನೆಯನ್ನು ಬಾಡಿಗೆಗೆ ಪಡೆದು ಆರಾಮಾಗಿ ಇರಬಹುದು ; ಜೀವನನಿರ್ವಹಣಾವೆಚ್ಚವೂ ಬೆಂಗಳೂರಿಗೆ ಹೋಲಿಸಿದಾಗ ತುಂಬ ಕಡಿಮೆಯೇ ; ಇಲ್ಲಿ ಪ್ರತಿಯೊಂದಕ್ಕೂ ಹೆಚ್ಚು ಹಣ ಸುರಿಯುವಾಗ ಅಲ್ಲಿಯ ದಿನಗಳು, ಸಂಜೆಗಳು ನೆನಪಾಗುತ್ತವೆ.

ಆರ್ಥಿಕ ಸ್ವಾವಲಂಬನೆ ಮನುಷ್ಯನಿಗೆ ಒಂದು ರೀತಿಯ ನೆಮ್ಮದಿ-ವಿಶ್ವಾಸವನ್ನು ಕೊಡುತ್ತದಂತೆ ; ಮೊದಲ ಸಂಬಳ ಪಡೆದಿದ್ದು, ಅದರಲ್ಲಿ ಮೊಬೈಲ್ ತೆಗೆದುಕೊಂಡಿದ್ದು, ಮೊದಲ ಬಾರಿ ಊರಿಗೆ ಬರುವಾಗ ಅಮ್ಮನಿಗೆ ಸೀರೆ ತಂದಿದ್ದು ಎಲ್ಲವೂ ಖುಷಿ ಕೊಡುವ ನೆನಪುಗಳೇ. ಅಲ್ಲಿ ಕಳೆದಷ್ಟು ದಿನ ಯಾವ ಕಟ್ಟುಪಾಡುಗಳೂ ಇರಲಿಲ್ಲ ; ನನ್ನದೇ ಚಿಕ್ಕ ಮನೆ, ಕೆಲಸ, ಖರ್ಚಿಗೆ ದುಡ್ಡು, ಮನಸೋ ಇಚ್ಛೆ ಅಲೆಯುವುದು . . . . . . ಸ್ವಾತಂತ್ರ್ಯದ ಪರಮಾವಧಿಯನ್ನು ಅನುಭವಿಸಿದ ದಿನಗಳವು.

ಯಾಕೆ ಹೀಗೆ ಹೇಳುತ್ತಿರುವುದೆಂದರೆ ನಮ್ಮ ಸಮಾಜದಲ್ಲಿ ಹುಡುಗಿಯರಿಗೆ ನಿರ್ಬಂಧಗಳು ಜಾಸ್ತಿ ; ಎಲ್ಲಿಗೋ ಹೋಗಬೇಕು, ಯಾರನ್ನೋ ಭೇಟಿ ಮಾಡಬೇಕು, ಏನನ್ನಾದರೂ ಮಾಡಬೇಕು ಎಂದರೆ ನೂರೆಂಟು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ, ಅನುಮಾನದ ನೋಟಗಳನ್ನು ಎದುರಿಸಬೇಕಾಗುತ್ತದೆ; ತಮ್ಮಿಚ್ಛೆಯಂತೆ ಬದುಕನ್ನು ರೂಪಿಸಿಕೊಳ್ಳುವುದು, ಬದುಕುವುದು ಅಷ್ಟು ಸುಲಭವಲ್ಲ ; ಬದುಕೆಂದರೆ ಇಷ್ಟೇ, ಹೀಗೇ ಇರಬೇಕು ಎಂದು ಮಿತಿಗಳನ್ನು ಹಾಕುತ್ತಾರೆ ; ಮಿತಿಗಳಲ್ಲಿ ಬದುಕುವುದು ನನಗಿಷ್ಟವಿಲ್ಲ, ನನ್ನ ಮನೋಭಾವಕ್ಕೆ ಒಗ್ಗುವಂತಹುದೂ ಅಲ್ಲ. ಪ್ರಪಂಚ ವಿಶಾಲವಾಗಿದೆ ; ಎಷ್ಟೊಂದು ಹೊಸ ವಿಷಯಗಳಿವೆ, ವಸ್ತುಗಳಿವೆ, ಅಚ್ಚರಿಗಳಿವೆ ; ಇರುವುದೊಂದೇ ಬದುಕು, ಸಾಧ್ಯವಾದಷ್ಟೂ ವಿಶಿಷ್ಟ-ವಿಭಿನ್ನ ಅನುಭವಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕು, ತಿಳಿದುಕೊಳ್ಳಬೇಕು, ಸಮೃದ್ಧಗೊಳಿಸಿಕೊಳ್ಳಬೇಕು ; ಹಿಂಜರಿದರೆ ಎಷ್ಟೋ ಅದ್ಭುತ ಎನಿಸುವಂಥ, ಖುಷಿ ಕೊಡುವಂಥ ಅನುಭವಗಳಿಂದ ವಂಚಿತರಾಗಬೇಕಾಗುತ್ತದೆ. ಹೀಗಾಗಿಯೇ ನನಗೆ ಆ ದಿನಗಳು ವಿಶೇಷವೆನಿಸಿದ್ದು, ಪದೇ ಪದೇ ಕಾಡುವುದೂ ಕೂಡಾ.

3 comments:

ಸುಭಾಸ.ಎಸ್.ಮಂಗಳೂರ said...

ಮಾಯಾನಗರಿ ರಾಮೋಜಿ ಫಿಲ್ಮ್ ಸಿಟಿಯ ಅನುಭವ, ಅಲ್ಲಿಯ ನೆನಪುಗಳ ಕುರಿತಾದ ನಿಮ್ಮ ಲೇಖನ ತುಂಬ ಇಷ್ಟವಾಯಿತು.ನಾನು ಕೂಡ ಈ.ಟಿವಿ ಯಲ್ಲಿಯೇ ಕೆಲಸ ಮಾಡುತ್ತಿರುವುದು. ನಿಮ್ಮ ಕವನಗಳೂ ಬಹಳಷ್ಟು ಅರ್ಥಪೂರ್ಣವಾಗಿವೆ.

Anonymous said...

ಥಾಂಕ್ಯೂ ಸುಭಾಷ್

shivu.k said...

ಗ್ರೀಷ್ಮ ಮೇಡಮ್,

ನಿಮ್ಮ ಜೀವನ ಪಯಣ ಚೆನ್ನಾಗಿರಲಿ....ನಿಮ್ಮಿಷ್ಟದಂತೆ ಬದುಕುವುದು ತುಂಬಾ ಸರಿಯಾದ ನಿರ್ದಾರ ಎಂದು ನನ್ನ ಅಭಿಪ್ರಾಯ....ರಾಮೋಜಿರಾವ್ ಫಿಲ್ಮ್ ಸಿಟಿ ನಾನು ನೋಡಬೇಕೆಂಬ ಆಸೆಯಿದೆ....ಅದರ ಪರಿಚಯ ಮಾಡಿಕೊಟ್ಟಿದ್ದಕ್ಕೆ ಥ್ಯಾಂಕ್ಸ್...
ಮತ್ತೆ ನನ್ನ ಬ್ಲಾಗಿನಲ್ಲಿ ಇದುವರೆಗಿನ ಬರೆದ ಲೇಖನಗಳಲ್ಲೇ ಅತ್ಯಂತ ಭಾವುಕತೆಯಿಂದ ಕೂಡಿದ ಲೇಖನ "ತಂಗಿ, ಇದೋ ನಿನಗೊಂದು ಪತ್ರ" ಹಾಕಿದ್ದೇನೆ...ನಿಜ ಘಟನೆಯ ಈ ಲೇಖನವನ್ನು ಬಿಡುವು ಮಾಡಿಕೊಂಡು ಓದುತ್ತಿರಲ್ಲಾ......ಪ್ಲೀಸ್.....